ತುಮಕೂರು | ಜಿಲ್ಲೆಯ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ (Vasanthanarasapura Industrial Area) ಲೋರಸ್ ಬಯೋ ಕಂಪನಿಯಲ್ಲಿ (Lorus Bio Company) ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ಘಟನೆಯಲ್ಲಿ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದು (Workers Died), ಇನ್ನಿಬ್ಬರು ಗಂಭೀರವಾಗಿ ಅಸ್ವಸ್ಥರಾಗಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತಾಪ್ (23) ಮಧುಗಿರಿ ತಾಲ್ಲೂಕಿನ ಮಾಗೋಡು ಗ್ರಾಮದ ನಿವಾಸಿ. ವೆಂಕಟೇಶ್ (32) ಶಿರಾ ತಾಲ್ಲೂಕಿನ ತರೂರು ಗ್ರಾಮದ ನಿವಾಸಿಯಾಗಿದ್ದ ಮೃತಪಟ್ಟಿದ್ದಾರೆ. ಮಂಜಣ್ಣ (42) ಶಿರಾ ತಾಲ್ಲೂಕಿನ ತರೂರು ಗ್ರಾಮದವರು. ಯುವರಾಜ್ (32) ಶಿರಾ ತಾಲ್ಲೂಕಿನ ತರೂರು ಗ್ರಾಮದವರಾಗಿದ್ದು ಅಸ್ವಸ್ಥರಾಗಿದ್ದಾರೆ.
ಬೆಳಗ್ಗೆ ನಾಲ್ವರು ಕಾರ್ಮಿಕರು ಮತ್ತು ಸೆಕ್ಯೂರಿಟಿ ಗಾರ್ಡ್ ಸೇರಿ, 1 ಲಕ್ಷ ಲೀಟರ್ ಸಾಮರ್ಥ್ಯದ ಕೆಮಿಕಲ್ ಸಂಪು ಸ್ವಚ್ಛಗೊಳಿಸಲು ಇಳಿದಿದ್ದರು. ಮೊದಲಿಗೆ ಇಳಿದ ಮಂಜಣ್ಣ ಅಸ್ವಸ್ಥಗೊಂಡ ಕಾರಣ, ಅವರನ್ನು ರಕ್ಷಿಸಲು ಇಳಿದ ಪ್ರತಾಪ್ ಮತ್ತು ವೆಂಕಟೇಶ್ ಸ್ಥಳದಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಈ ಘಟನೆ ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುರಕ್ಷತಾ ಕ್ರಮಗಳ ಲೋಪ ಇಂತಹ ದಾರುಣ ಘಟನೆಗೆ ಕಾರಣವಾಗಿದೆಯೆಂಬ ಅನುಮಾನಗಳು ಮೂಡುತ್ತಿವೆ.
ಘಟನೆ ಕೈಗಾರಿಕಾ ವಲಯದಲ್ಲಿ ಭೀತಿಯ ವಾತಾವರಣವನ್ನು ಉಂಟುಮಾಡಿದ್ದು, ಕಾರ್ಮಿಕರ ಸುರಕ್ಷತೆ ಕುರಿತಂತೆ ಗಂಭೀರ ಪ್ರಶ್ನೆಗಳು ಎತ್ತಲಾಗಿದೆ. ಸರ್ಕಾರ ಮತ್ತು ಕಾರ್ಖಾನೆ ನಿರ್ವಹಣಾ ಮಂಡಳಿಯಿಂದ ಸೂಕ್ತ ಕ್ರಮ ನಿರೀಕ್ಷೆಯಲ್ಲಿದೆ.