Site icon Karnataka 360

S.R. Nayak Death | ನ್ಯಾಯಮೂರ್ತಿ ಎಸ್.  ಆರ್ ನಾಯಕ್  ಬಗ್ಗೆ  ನಿಮಗೆಷ್ಟು  ಗೊತ್ತು..?

ಬೆಂಗಳೂರು | ಕನ್ನಡ ನಾಡಿಗೆ, ನ್ಯಾಯ ಕ್ಷೇತ್ರಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ ನ್ಯಾಯಮೂರ್ತಿ ಎಸ್.ಆರ್. ನಾಯಕ್ (S.R. Nayak Death) (80) ಅವರು ಭಾನುವಾರ ಬೆಂಗಳೂರಿನಲ್ಲಿ ನಿಧನರಾದರು. ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ, ಛತ್ತೀಸ್‌ಗಢ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಹಾಗೂ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ (Karnataka State Human Rights Commission) ಮತ್ತು ಕಾನೂನು ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

1945ರ ಜನವರಿ 1ರಂದು ಉತ್ತರ ಕನ್ನಡದ ನಾಡಮ್ಯಾಸಕೇರಿ ಗ್ರಾಮದಲ್ಲಿ ಜನಿಸಿದ್ದ ನಾಯಕ್ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದು, ಎಂ. ಗೋಪಾಲಕೃಷ್ಣ ಶೆಟ್ಟಿ ಹಾಗೂ ಎಲ್.ಜಿ. ಹಾವನೂರು ಅವರ ಮಾರ್ಗದರ್ಶನದಲ್ಲಿ ವಕೀಲತನ ಆರಂಭಿಸಿದರು. ನಂತರ ನ್ಯಾಯಾಧೀಶರಾಗಿ ಅವರು ನ್ಯಾಯತಂತ್ರದ ವಿವಿಧ ಹಂತಗಳಲ್ಲಿ ಮುನ್ನಡೆದು, ನ್ಯಾಯಮೂರ್ತಿ ಹಾಗೂ ಶಿಕ್ಷಣ ತಜ್ಞರಾಗಿಯೂ ಹೆಸರುವಾಸಿಯಾಗಿದ್ದರು.

ಅವರಿಗೆ ನಾಡೋಜ ಪುರಸ್ಕಾರವೂ ಲಭಿಸಿತ್ತು. ಬದುಕಿನ ಕೊನೆಯವರೆಗೆ ನ್ಯಾಯ, ನ್ಯಾಯತೆ ಮತ್ತು ಮಾನವ ಹಕ್ಕುಗಳ ಪೋಷಕರಾಗಿ ಅವರು ಕಾರ್ಯ ನಿರ್ವಹಿಸಿದರು. ಅವರ ನಿಧನದಿಂದ ಕರ್ನಾಟಕ ಕಾನೂನು ಲೋಕವು ಶ್ರೇಷ್ಠ ತಜ್ಞನನ್ನು ಕಳೆದುಕೊಂಡಿದೆ.

ಮೃತರಿಗೆ ಶಾಲಿನಿ ಎಸ್ ನಾಯಕ್ ಎಂಬ ಪತ್ನಿ, ಪುತ್ರ  ಡಾ. ಎನ್.ಎಸ್. ನಾಯಕ್, ಪುತ್ರಿ ನಿಶಾ ಗಾಂವ್ಕರ್ ಮತ್ತು ಇತರ ಬಂಧು-ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಸೋಮವಾರ (19) ಸಂಜೆ 4 ಗಂಟೆಗೆ ಹೆಬ್ಬಾಳ ಚಿತಾಗಾರದಲ್ಲಿ ನಡೆಯಲಿದೆ. ಆರ್.ಎಂ.ವಿ ಎರಡನೇ ಹಂತದ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Exit mobile version