ತುಮಕೂರು | ಜಿಲ್ಲೆಯ ಶಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಕೆಕೆ ಪಾಳ್ಯ ಮತ್ತು ಬಸವನಹಳ್ಳಿ ನಡುವಿನ ತಾತ್ಕಾಲಿಕ ಸೇತುವೆ (Temporary Bridge) ಬಳಿ ಮಾರ್ಗದೋಷದಿಂದ ಸರ್ಕಾರಿ ಬಸ್ (Government Bus) ಮಣ್ಣಿನಲ್ಲಿ ಸಿಕ್ಕಿ, ಸುಮಾರು 3 ಗಂಟೆಗಳ ಕಾಲ ಪರದಾಡಿದ ಘಟನೆ ವರದಿಯಾಗಿದೆ.
ಬಸ್ನಲ್ಲಿ ಸುಮಾರು 25 ಪ್ರಯಾಣಿಕರು (Passengers) ಇದ್ದರು. ಮಳೆಗಾಲದ ಹಿನ್ನೆಲೆಯಲ್ಲೂ ಸೂಕ್ತ ತಂತ್ರಜ್ಞಾನ ಅನುಸರಿಸದೆ ನಿರ್ಮಿಸಲಾದ ತಾತ್ಕಾಲಿಕ ರಸ್ತೆಯು ಈ ಅವಘಡಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರ ಪ್ರಕಾರ, ಕೇವಲ ಮೂರು ದಿನಗಳ ಹಿಂದೆಯಷ್ಟೆ ಹಳೆಯ ಸೇತುವೆ ತೆರವುಗೊಳಿಸಿ ಹೊಸ ಸೇತುವೆ ಕಾಮಗಾರಿ ಪ್ರಾರಂಭಿಸಲಾಗಿದೆ. ಆದರೆ ತಾತ್ಕಾಲಿಕವಾಗಿ ನಿರ್ಮಿಸಲಾದ ರಸ್ತೆ ಮಣ್ಣಿನಿಂದ ಮಾತ್ರ ತುಂಬಲಾಗಿದ್ದು, ಪೈಪ್ಗಳು ಅಥವಾ ನೀರಿನ ಹರಿವಿಗೆ ವ್ಯವಸ್ಥೆ ಇಲ್ಲದೆ ಬಿಟ್ಟಿದ್ದಾರೆ. ಇದರಿಂದಾಗಿ ಮಳೆ ಬಂದಾಗ ರಸ್ತೆ ಮಣ್ಣು ಕುಸಿದು ಬಸ್ ಸಿಕ್ಕಿಹಾಕಿಕೊಂಡಿದೆ.
ಸ್ಥಳೀಯರು ಮತ್ತು ಪ್ರಯಾಣಿಕರ ಸಹಕಾರದಿಂದ ಕೊನೆಗೆ ಬಸ್ (Government Bus) ಹೊರ ತೆಗೆಯಲಾಯಿತು. ಆದರೆ ಈ ಘಟನೆಗೆ ನಿರ್ಲಕ್ಷ್ಯ ಎಂಜಿನಿಯರ್ಗಳು ಮತ್ತು ನಿರ್ದಿಷ್ಟ ಯೋಜನೆಯ ಕೊರತೆಯೇ ಕಾರಣವೆಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ಸೇತುವೆ ಕಾಮಗಾರಿಗೆ ವೈಜ್ಞಾನಿಕ ಯೋಚನೆ ಇಲ್ಲದೆ ಕೆಲಸ ಆರಂಭಿಸಿರುವವರು ಕೂಡಲೇ ಈ ಕುರಿತು ಗಮನಹರಿಸಿ, ಬೃಹತ್ ಸಮಸ್ಯೆಗೆ ದಾರಿ ಮಾಡಿಕೊಳ್ಳುವುದನ್ನು ತಪ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.