ಬೆಳಗಾವಿ | ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಟಿ.ಬಿ. ಜಯಚಂದ್ರ ಅವರು ಅತ್ಯುತ್ತಮ ಶಾಸಕ ಪ್ರಶಸ್ತಿಗೆ (Best MLA Award) ಆಯ್ಕೆಯಾಗಿದ್ದು, ವಿಧಾನಸಭೆಯಲ್ಲಿ ಸಭಾಧ್ಯಕ್ಷ ಯು.ಟಿ ಖಾದರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸಭೆ ವಿರೋಧಪಕ್ಷದ ನಾಯಕ ಆರ್. ಅಶೋಕ್, ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸೇರಿದಂತೆ ವಿವಿಧ ಗಣ್ಯರು ಟಿ.ಬಿ. ಜಯಚಂದ್ರ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ (Best MLA Award) ಪ್ರದಾನ ಮಾಡಿದರು.
ಶಾಸಕ ಜಯಚಂದ್ರ ಅವರ ಸಮಯಪಾಲನೆ ಹಾಗೂ ಶಿಸ್ತುಬದ್ದ ಕಾರ್ಯ ನಿರ್ವಹಣೆ, ಕಲಾಪದಲ್ಲಿ ಅವರು ತೊಡಗಿಸಿಕೊಳ್ಳುವ ರೀತಿಯ ಬಗ್ಗೆ ಕೊಂಡಾಡಿದರು. ಸದನದಲ್ಲಿ ಹಾಜರಿದ್ದು ಸಭೆಯ ಗಾಂಭೀರ್ಯತೆ ಕಾಪಾಡುವುದರ ಮೂಲಕ ಕಿರಿಯ ಶಾಸಕರಿಗೆ ತೋರಿದ ಮಾರ್ಗದರ್ಶನ ಮೆಚ್ಚುವಂತದ್ದು ಎಂದು ಅಭಿಪ್ರಾಯಪಟ್ಟರು.
ಕಳ್ಳಂಬೆಳ್ಳ ಮತ್ತು ಶಿರಾದಿಂದ ಒಟ್ಟು 7 ಬಾರಿ ಶಾಸಕ
ಟಿ.ಬಿ. ಜಯಚಂದ್ರ ಅವರು ಕಳ್ಳಂಬೆಳ್ಳ ಮತ್ತು ಶಿರಾದಿಂದ ಒಟ್ಟು 7 ಬಾರಿ ಶಾಸಕರಾಗಿದ್ದು, ಅವರು ರಾಜ್ಯದಲ್ಲಿ ಸಚಿವರಾಗಿ ಕೃಷಿ, ಸಂಸದೀಯ ವ್ಯವಹಾರ ಖಾತೆಗಳನ್ನ ನಿರ್ವಹಿಸಿದ್ಧಾರೆ. ವಿವಿಧ ನಿಗಮ ಮಂಡಳಿಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.
ಪ್ರಸ್ತುತ ಅವರು ದೆಹಲಿ ವಿಶೇಷ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ ಸದನದಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಇದಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ, ಉಪಸಭಾಪತಿ ರುದ್ರಮಪ್ಪ ಲಮಾಣಿ ಅವರು ಸಾಕ್ಷಿಯಾದರು. ಸದನದಲ್ಲಿ ಉಪಸ್ಥಿತರಿದ್ದ ಸದನದ ಸರ್ವ ಸದಸ್ಯರು ಮೇಜುಕುಟ್ಟಿ ಅಭಿನಂದಿಸಿದರು.