ಬೆಂಗಳೂರು | ಕರ್ಣಾಟಕದ ಬಂಡೀಪುರ ಅರಣ್ಯ (Bandipur Forest) ಪ್ರದೇಶದಲ್ಲಿ ರಾತ್ರಿ ವೇಳೆ ಕೆಲವು ನಿರ್ಬಂಧಿತ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಈ ನಿರ್ಧಾರವು ಸೂಕ್ಷ್ಮ ವನ್ಯಜೀವಿಗಳ ಆವಾಸಸ್ಥಾನವನ್ನು ರಕ್ಷಿಸುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಕಟ್ಟುನಿಟ್ಟಾದ ರಾತ್ರಿ ಪ್ರಯಾಣ ನಿಷೇಧವನ್ನು ಸ್ವಲ್ಪ ಸಡಿಲಗೊಳಿಸುತ್ತದೆ. ಆದರೆ, ರಾತ್ರಿ 9 ಗಂಟೆಯವರೆಗೆ ಮಾತ್ರ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ, ನಂತರ ಕೇವಲ ಕೇರಳದಿಂದ ಕರ್ನಾಟಕದ ಕಡೆಗೆ 2 ಬಸ್ಸುಗಳು ಮತ್ತು 1 ಆಂಬುಲೆನ್ಸ್ ಸಂಚರಿಸಲು ಅವಕಾಶವಿರುತ್ತದೆ ಎಂದು ಹೇಳಿದರು.
ಸಚಿವ ಈಶ್ವರ ಖಂಡ್ರೆ ಸ್ಪಷ್ಟನೆ
ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರ ಖಂಡ್ರೆ, “ಜೀವವೈವಿಧ್ಯಕ್ಕೆ ಹೆಸರುವಾಸಿಯಾದ ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ಮಾನವ ಹಸ್ತಕ್ಷೇಪವನ್ನು ಕಡಿಮೆ ಮಾಡಲು ಮೊದಲು ನಿಷೇಧವನ್ನು ಜಾರಿಗೊಳಿಸಲಾಗಿತ್ತು. ಆದರೆ, ಅಗತ್ಯ ಸಾರಿಗೆ ಸೇವೆಗಳಿಗೆ ಸಾರ್ವಜನಿಕರು ಮತ್ತು ರಾಜಕೀಯ ನಾಯಕರು ಮನವಿ ಮಾಡಿದ್ದರಿಂದ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ” ಎಂದು ತಿಳಿಸಿದರು.
ಸಂಚಾರಕ್ಕೆ (Bandipur Forest) ಅನುವು ಮಾಡಿಕೊಡುವ ಹಳೆಯ ನಿಯಮ
2009ರಲ್ಲಿ ತುರ್ತು ಪರಿಸ್ಥಿತಿಗಳು ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಆಂಬುಲೆನ್ಸ್ ಸೇವೆ ಸೇರಿ 2 ಬಸ್ಸುಗಳಿಗೆ ರಾತ್ರಿ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಇತ್ತೀಚೆಗೆ ಅದೇ ಅನುಮತಿಯನ್ನು ಕಾನೂನು ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿನೊಂದಿಗೆ ಮುಂದುವರಿಸಲಾಗಿದೆ ಎಂದು ಸಚಿವ ಖಂಡ್ರೆ ಹೇಳಿದರು.
ವಿಪಕ್ಷಗಳ ಟೀಕೆ ಮತ್ತು ಸರ್ಕಾರದ ಪ್ರತಿಕ್ರಿಯೆ
ಬಂಡೀಪುರ ಅರಣ್ಯದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅನುಮತಿ ನೀಡಿರುವ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸರ್ಕಾರವನ್ನು ಟೀಕಿಸುತ್ತಿವೆ. ಬಂಡೀಪುರ ಅರಣ್ಯದಲ್ಲಿ ಯಾವುದೇ ಹೊಸ ನಿರ್ಧಾರ ಕೈಗೊಂಡಿಲ್ಲ. ಹಳೆ ನೀತಿಯನ್ನು ಮುಂದುವರಿಸಲಾಗುತ್ತಿದೆ. ಆದರೆ, ವಿಪಕ್ಷಗಳು ಸುಳ್ಳು ಆರೋಪಗಳನ್ನು ಮಾಡುತ್ತಿವೆ ಎಂದು ಖಂಡ್ರೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದರು.
ಬಿಜೆಪಿ ಶಾಸಕರು ದೇವರಂತೆ ಪೂಜಿಸುತ್ತಿರುವ ಆನೆಗಳನ್ನು ಗುಂಡಿಟ್ಟು ಕೊಲ್ಲಲು ಸದನದಲ್ಲಿ ಅನುಮತಿ ಕೇಳುವವರು. ಇಂತಹವರು ವನ್ಯಜೀವಿ ಸಂರಕ್ಷಣೆ ಬಗ್ಗೆ ಪಾಠ ಹೇಳುವುದು ನಾಚಿಕೆಗೇಡಿತನ ಎಂದು ಸಚಿವ ಖಂಡ್ರೆ ಟೀಕಿಸಿದರು.
ಸಾಮಾಜಿಕ ಜಾಲತಾಣದಲ್ಲಿ ‘ಸೇವ್ ಬಂಡೀಪುರ’ ಅಭಿಯಾನ
ಈ ನಿರ್ಧಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ‘ಸೇವ್ ಬಂಡೀಪುರ’ ಎಂಬ ಅಭಿಯಾನ ಆರಂಭವಾಗಿದೆ. ಸರ್ಕಾರ ವನ್ಯಜೀವಿ ಸಂರಕ್ಷಣೆಗಾಗಿ ಬದ್ಧವಾಗಿದೆ ಎಂದು ಖಂಡ್ರೆ ಹೇಳಿದರು. ಇಂದಿರಾ ಗಾಂಧಿ ಅವರ ಸರ್ಕಾರ ವನ್ಯಜೀವಿ ಸಂರಕ್ಷಣೆಗೆ ಕಾಯ್ದೆ ತಂದಿತ್ತು. ಕಾಂಗ್ರೆಸ್ ಪಕ್ಷವು ಅದನ್ನು ಕಟ್ಟುನಿಟ್ಟಾಗಿ ಜಾರಿ ಮಾಡುತ್ತದೆ ಎಂದಿದ್ದಾರೆ.
ಸಂಚರ ಮಾರ್ಗ (ಸಂಚರ ಮಾರ್ಗ)
ರಾಷ್ಟ್ರೀಯ ಹೆದ್ದಾರಿ ಸಂ.67 ಗುಂಡ್ಲುಪೇಟೆ-ಊಟಿ ಅರಣ್ಯ ಮಾರ್ಗ ಮತ್ತು ರಾಷ್ಟ್ರೀಯ ಹೆದ್ದಾರಿ ಸಂ.212 ಗುಂಡ್ಲುಪೇಟೆ-ಸುಲ್ತಾನ್ ಬತೇರಿ ಅರಣ್ಯ ಮಾರ್ಗಗಳಲ್ಲಿ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಎರಡು ಬಸ್ಸುಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. 03-06-2009ರ ಆದೇಶದ ಪ್ರಕಾರ ಈ ನಿಯಮವನ್ನು ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.