ತುಮಕೂರು | ಸದಾ ವಿವಾದಗಳಲ್ಲಿ ಸಿಲುಕಿಕೊಂಡು ಸುದ್ದಿಯಾಗುವ ತುಮಕೂರು ಜಿಲ್ಲೆಯ ಬಿಜೆಪಿ (Tumkur BJP) ಕಾರ್ಯಕರ್ತೆ ಶಕುಂತಲಾ ನಟರಾಜ್ (Shakuntala Nataraj) ಅವರ ಪುತ್ರ ತ್ರಿಶಾಲ್ (Trishala) (13) ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ತುಮಕೂರಿನ ವಿಜಯನಗರದ 2ನೇ ಮುಖ್ಯ ರಸ್ತೆಯಲ್ಲಿ ನಡೆದಿದೆ. ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ತ್ರಿಶಾಲ್ ಇಂದು (ಜನವರಿ 10) ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಜೀವನಕ್ಕೆ ವಿದಾಯ ಹೇಳಿದ್ದಾನೆ.
ತ್ರಿಶಾಲ್ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್
ಮೃತ ತ್ರಿಶಾಲ್ ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿದ್ದು, ಪಾರಿವಾಳದ ಬೆಟ್ಟಿಂಗ್ ವಿಚಾರಕ್ಕೆ ಸ್ನೇಹಿತರೊಂದಿಗೆ ಗಲಾಟೆಯಾದ ಕಾರಣ ಆತ ನೊಂದು ಈ ಆತ್ಮಹತ್ಯೆಗೆ ಹೆಜ್ಜೆ ಎತ್ತಿದ್ದಾನೆ ಎಂದು ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ. ತ್ರಿಶಾಲ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ರಾಜಕೀಯ ನಿಲುವುಗಳಿಂದ ಶಕುಂತಲಾ ನಟರಾಜ್ (Shakuntala Nataraj) ಸುದ್ದಿ
ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ (Shakuntala Nataraj), ತಮ್ಮ ರಾಜಕೀಯ ನಿಲುವುಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕಾರಿ ಟೀಕೆಗಳಿಂದ ಸದಾ ಚರ್ಚೆಯಲ್ಲಿರುವ ವ್ಯಕ್ತಿ. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯನವರ ಕುಟುಂಬದ ಬಗ್ಗೆ ಟೀಕಿಸಿ ಬಂಧನಕ್ಕೊಳಗಾಗಿದ್ದ ಇವರು, ವಿವಾದಗಳಿಂದಲೇ ಹೆಚ್ಚು ಪರಿಚಿತರಾಗಿದ್ದಾರೆ. ಈ ದುಃಖಕರ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.