ಬೆಂಗಳೂರು | ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ತನಿಖೆ ಮುಂದುವರೆದಿರುವ ವೇಳೆ ನಟ ದರ್ಶನ್ (Actor Darshan) ಸೇರಿದಂತೆ ಎಲ್ಲಾ ಆರೋಪಿಗಳ ಪರ ವಕೀಲರಿಗೆ ಹೆಚ್ಚುವರಿ ಆರೋಪಪಟ್ಟಿಯ ಪ್ರತಿಯನ್ನು ನೀಡಲು ಪ್ರಾಸಿಕ್ಯೂಷನ್ಗೆ ಬೆಂಗಳೂರು ಸತ್ರ ನ್ಯಾಯಾಲಯ ಮಂಗಳವಾರ ನಿರ್ದೇಶನ ನೀಡಿದೆ. ಪ್ರಕರಣದ ವಿಚಾರಣೆಯನ್ನು 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜೈಶಂಕರ್ ಅವರು ನಡೆಸಿದರು.
ತನಿಖೆ ವೇಳೆ ಜಪ್ತಿ ಮಾಡಿರುವ ₹34 ಲಕ್ಷ ಬಿಡುಗಡೆಗೆ ನಟ ದರ್ಶನ್ (Actor Darshan) ಅರ್ಜಿ ಸಲ್ಲಿಸಿದ್ರೆ, ಅದಕ್ಕೆ ಆಕ್ಷೇಪಿಸಿರುವ ಆದಾಯ ತೆರಿಗೆ ಇಲಾಖೆ ಕೂಡ ತಮ್ಮ ಅರ್ಜಿಯನ್ನು ಸಲ್ಲಿಸಿದೆ. ಈ ಅರ್ಜಿಗಳ ವಿಚಾರಣೆ ಜೂನ್ 3ಕ್ಕೆ ನಿಗದಿಯಾಗಿದ್ದು, ಆರೋಪ ನಿಗದಿಗೂ ಮುನ್ನ ವಾದ ಆಲಿಸಲು ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಲಾಗಿದೆ.
ಇದನ್ನೂ ಓದಿ : Orange Alert | ರಾಜ್ಯಾದ್ಯಂತ ಭಾರೀ ಮಳೆಯ ಮುನ್ಸೂಚನೆ: ಆರೆಂಜ್ ಅಲರ್ಟ್ ಘೋಷಣೆ
ಪ್ರಕರಣದ ಮೂರನೇ ಆರೋಪಿ ಪುಟ್ಟಸ್ವಾಮಿ ಅಲಿಯಾಸ್ ಕೆ. ಪವನ್ ಹೊರತುಪಡಿಸಿ, ಉಳಿದ ಆರೋಪಿಗಳು ಇಂದು ನ್ಯಾಯಾಲಯದ ಮುಂದೆ ಹಾಜರಿದ್ದರು. ಮೊದಲನೇ ಆರೋಪಿ ಪವಿತ್ರಾ ಗೌಡ ಮೇ 24ರಿಂದ ಜೂನ್ 14ರ ವರೆಗೆ ಮುಂಬೈ, ಕಲ್ಕತ್ತಾ, ದೆಹಲಿ, ಸೂರತ್ ಸೇರಿದಂತೆ ವಿವಿಧ ನಗರಗಳಲ್ಲಿ ಬೋಟಿಕ್ ವಸ್ತು ಪ್ರದರ್ಶನಗಳಲ್ಲಿ ಭಾಗವಹಿಸಲು ಜಾಮೀನಿನ ಷರತ್ತುಗಳಲ್ಲಿ ಸಡಿಲಿಕೆ ಪಡೆದುಕೊಂಡಿದ್ದಾರೆ.

ಅದರಂತೆಯೇ, 6ನೇ ಆರೋಪಿ ಜಗದೀಶ್ ಮತ್ತು 7ನೇ ಆರೋಪಿ ಅನುಕುಮಾರ್ ತಮ್ಮ ಊರಿಗೆ ತೆರಳಲು ಅನುಮತಿ ಪಡೆದಿದ್ದಾರೆ. 10ನೇ ಆರೋಪಿ ವಿ. ವಿನಯ್ ಉದ್ಯಮದ ಕೆಲಸಕ್ಕಾಗಿ ಆಂಧ್ರಪ್ರದೇಶ, ತೆಲಂಗಾಣ, ಕೇರಳ ಹಾಗೂ ತಮಿಳುನಾಡಿಗೆ 6 ವಾರ ಪ್ರಯಾಣಕ್ಕೆ ಅನುಮತಿ ಪಡೆದುಕೊಂಡಿದ್ದಾರೆ. 11ನೇ ಆರೋಪಿ ನಾಗರಾಜು ಮೈಸೂರು, ಹೊಸಪೇಟೆ ಹಾಗೂ ಕಲಬುರ್ಗಿಗೆ ಪ್ರಯಾಣಕ್ಕೆ ಅವಕಾಶ ಪಡೆದಿದ್ದಾರೆ. 14ನೇ ಆರೋಪಿ ಪ್ರದೋಷ್ ಆರ್. ರಾವ್ ಎಚ್ ಡಿ ಕೋಟೆ, ಚಿಕ್ಕಮಗಳೂರು ಮತ್ತು ಬಳ್ಳಾರಿಗೆ ಹೋಗಲು ನ್ಯಾಯಾಲಯ ಅನುಮತಿ ನೀಡಿದೆ.
ಆರೋಪಿಗಳ ಪರ ವಕೀಲರು, ಪ್ರಾಸಿಕ್ಯೂಷನ್ ಸಲ್ಲಿಸಿದ ಹೆಚ್ಚುವರಿ ಆರೋಪ ಪಟ್ಟಿಯ ಪ್ರತಿಯನ್ನು ನಮಗೆ ನೀಡಲಾಗಿಲ್ಲ ಎಂದು ನ್ಯಾಯಾಲಯದ ಗಮನ ಸೆಳೆದ ಬಳಿಕ, ಅದರ ಪ್ರತಿಯನ್ನು ವಕೀಲರಿಗೆ ಒದಗಿಸಬೇಕೆಂದು ನ್ಯಾಯಾಲಯವು ಸ್ಪಷ್ಟ ಆದೇಶ ನೀಡಿದೆ.