ತುಮಕೂರು | ನಟಿ ರನ್ಯಾ ರಾವ್ ಸಂಬಂಧಿತ ಬಂಗಾರದ ಸ್ಮಗ್ಲಿಂಗ್ ಪ್ರಕರಣದ (Ranya Rao gold smuggling case) ಹಿನ್ನೆಲೆಯಲ್ಲಿ, ಗೃಹ ಸಚಿವ ಡಾ.ಜಿ. ಪರಮೇಶ್ವರ್ (Home Minister Dr. G. Parameshwar) ಅವರ ಒಡೆತನದಲ್ಲಿರುವ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇಂದು ಬೆಳಗ್ಗೆ ಎನ್ಫೋರ್ಸ್ಮೆಂಟ್ ಡೈರೆಕ್ಟೋರೇಟ್ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ತುಮಕೂರು ಜಿಲ್ಲೆಯ ಹೆಗ್ಗೆರೆ ಬಳಿ ಇರುವ ಸಿದ್ಧಾರ್ಥ ಮೆಡಿಕಲ್ ಕಾಲೇಜು ಹಾಗೂ ಎಸ್ಎಸ್ಐಟಿಐ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ದಾಳಿ ನಡೆಯುತ್ತಿದ್ದು, ಅಲ್ಲಿನ ಹಣಕಾಸು ವ್ಯವಹಾರಗಳ ದಾಖಲೆಗಳನ್ನು ಇಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ವಿದೇಶದಿಂದ ಅಕ್ರಮವಾಗಿ ಬಂಗಾರ ಸಾಗಿಸುತ್ತಿದ್ದ ನಟಿ ರನ್ಯಾ ರಾವ್ (Ranya Rao gold smuggling case) ಮತ್ತು ಮೆಡಿಕಲ್ ಕಾಲೇಜುಗಳ ಮಧ್ಯೆ ಹಣ ವರ್ಗಾವಣೆ ನಡೆದಿರುವ ಶಂಕೆ ಹಿನ್ನೆಲೆಯಲ್ಲಿ ಈ ದಾಳಿ ನಡೆಯುತ್ತಿದೆ. ಹೀಗಾಗಿ ಕಾಲೇಜುಗಳ ಹಣಕಾಸು ಲೆಕ್ಕಪತ್ರಗಳು, ಹಣ ವರ್ಗಾವಣೆಯ ದಾಖಲೆಗಳು ಇಡಿ ಪರಿಗಣನೆಗೆ ಒಳಗಾಗಿವೆ.
ಇಂದು ಬೆಳಿಗ್ಗೆ ಐದು ಇನ್ನೋವಾ ಕಾರುಗಳಲ್ಲಿ ಇಡಿ ತಂಡ ಆಗಮಿಸಿ ಸಿದ್ಧಾರ್ಥ ಸಂಸ್ಥೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದೆ. ಈ ಹಿಂದೆ, ಮೂರು ವರ್ಷಗಳ ಹಿಂದೆ ಐಟಿ ಇಲಾಖೆ ಇವುಗಳ ಮೇಲೆ ದಾಳಿ ನಡೆಸಿದ್ದಾಗಿಯೇ ಇತ್ತೀಚಿನ ದಾಳಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.