ತುಮಕೂರು | ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ಅಗತ್ಯ ಮಾನದಂಡಗಳನ್ನು ಅನುಸರಿಸದ 9 ಶಾಲೆಗಳ ಪ್ರಸ್ತಾವನೆಯನ್ನು ತಿರಸ್ಕೃತ ಮಾಡಲಾಗಿದೆ ಎಂದು ಈ ಹಿಂದೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಡಿಡಿಪಿಐ ನಂಜಯ್ಯ ಮಾಹಿತಿ ನೀಡಿದ್ದರು.
ಇದರಿಂದಾಗಿ ಈ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಬಾರದು, ಒಂದು ವೇಳೆ ದಾಖಲು ಮಾಡಿದರೆ, ಅದಕ್ಕೆ ನಾವು ಜವಾಬ್ದಾರರಲ್ಲ ಎಂಬ 9 ಶಾಲೆಗಳ ಮಾಹಿತಿಯೊಂದಿಗೆ ಪ್ರಕಟಣೆಯನ್ನು ನೀಡಿದ್ದರು. ಇದರಲ್ಲಿ ತುಮಕೂರು ತಾಲೂಕಿನ ಅಜ್ಜಪ್ಪನಹಳ್ಳಿ ವ್ಯಾಪ್ತಿಯಲ್ಲಿರುವ ಎಲ್ಲಾಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ವನಿತಾ ವಿದ್ಯಾ ಕೇಂದ್ರವು ಕೂಡ ಒಂದಾಗಿತ್ತು.
ಈ ಶಾಲೆಯಲ್ಲಿ 8ನೇ ತರಗತಿಯವರೆಗೆ ಶಿಕ್ಷಣ ಇಲಾಖೆಯ ನಿಯಮಾನುಸಾರ ಶಾಲೆ ನಡೆಯುತ್ತಿದ್ದು, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ನಮ್ಮ ಶಾಲೆಯು ಒಂದು ಎಂದು ತೋರಿಸಲಾಗಿದೆ. ಆದರೆ ಅದು ಇಲಾಖೆಯ ಕಣ್ತಪ್ಪಿನಿಂದ ಆಗಿದೆಯೇ ಹೊರತು ಶಾಲೆಯಿಂದ ಯಾವುದೆ ತಪ್ಪು ನಡೆದಲ್ಲ, ಪೋಷಕರು ಪತ್ರಿಕೆಗಳಲ್ಲಿ ಬಂದ ಸುದ್ದಿಗೆ ಆತಂಕ ಪಡುವ ಅಗತ್ಯವಿಲ್ಲ ಧೈರ್ಯವಾಗಿ ನಮ್ಮ ಶಾಲೆಗೆ ಎಂಟನೇ ತರಗತಿಯವರೆಗೂ ದಾಖಲಿಸಬಹುದಾಗಿದೆ ಎಂದು ಯಲ್ಲಾಪುರ ವನಿತಾ ವಿದ್ಯಾ ಕೇಂದ್ರದ ಮುಖ್ಯ ಶಿಕ್ಷಕರಾದ ಸುಜಾತ ಸ್ಪಷ್ಟಪಡಿಸಿದ್ದಾರೆ.
ಇನ್ನು ಜಿಲ್ಲಾ ಉಪ ನಿರ್ದೇಶಕರ ಕಚೇರಿಯಿಂದ ಆದ ಕಣ್ತಪ್ಪಿನಿಂದ ಈ ರೀತಿಯಾಗಿ ಸುದ್ದಿ ಪ್ರಕಟಗೊಂಡಿದ್ದು, ಉಪನಿರ್ದೇಶಕರಿಗೆ ಲಿಖಿತ ಮನವಿಯನ್ನು ಸಲ್ಲಿಸಲಾಗಿದೆ. ಅಲ್ಲದೆ ಅವರು ಸಹ ಈ ಕುರಿತು ನಮಗೆ ಸ್ಪಷ್ಟನೆಯನ್ನು ನೀಡಿದ್ದು, ಅಧಿಕಾರಿಗಳ ಕಣ್ತಪಿನಿಂದ ಇದು ನಡೆದಿದ್ದು ಇದನ್ನು ಪುನರ್ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಹೀಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದ 9 ಶಾಲೆಗಳಲ್ಲಿ ಯಲ್ಲಾಪುರದ ವನಿತಾ ವಿದ್ಯಾ ಕೇಂದ್ರದಲ್ಲಿ 8ನೇ ತರಗತಿಯವರೆಗೆ ಪೋಷಕರು ಆತಂಕವಿಲ್ಲದೆ ದಾಖಲಾತಿ ಮಾಡಬಹುದು ಎಂದು ಸೂಚಿಸಲಾಗಿದೆ.