ತುಮಕೂರು | ಜಿಲ್ಲೆಯ ಶಿರಾ ತಾಲ್ಲೂಕಿನ ಬಂದಕುಂಟೆ ಗ್ರಾಮದ ರೈತ ಜುಂಜಣ್ಣ ಅವರು ಬೆಳೆದಿರುವ ಕ್ರಾಸ್ ಹತ್ತಿ ಬೆಳೆ (Cotton Crop) ಮೇಲೆ ದುಷ್ಕರ್ಮಿಗಳು ಕಣ್ಣಿಟ್ಟಿದ್ದು, ರಾತ್ರಿ ವೇಳೆ 16 ಸಾಲು ಹತ್ತಿ ಗಿಡಗಳನ್ನು ಕಿತ್ತು ಹಾಕಿ (Cotton Plant Damage) ಅಟ್ಟಹಾಸ ಮೆರೆದಿದ್ದಾರೆ.
ಜುಂಜಣ್ಣ ಅವರು ಕಾವೇರಿ ಸೀಡ್ಸ್ (Kaveri Seeds) ಕಂಪನಿಯಿಂದ ಗುತ್ತಿಗೆ ಮೇಲೆ ಕ್ರಾಸ್ ಹತ್ತಿ ಬೀಜ ಪಡೆದು 2 ಎಕರೆ ಭೂಮಿಯಲ್ಲಿ ಉತ್ತಮ ಹತ್ತಿ ಬೆಳೆದಿದ್ದರು. ಆದರೆ ಮಂಗಳವಾರ ರಾತ್ರಿ ಹತ್ತಿ ಗಿಡಗಳನ್ನು ಕಿತ್ತು (Cotton Plant Damage) ಹಾಕಿದ್ದು ಇದರಿಂದ ಅವರು ಭಾರೀ ಆಘಾತಕ್ಕೆ ಒಳಗಾಗಿದ್ದಾರೆ.
ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ. ವೈಯಕ್ತಿಕ ದ್ವೇಷವಿದ್ದರೆ ನೇರವಾಗಿ ಬಂದು ಮಾತನಾಡಬಹುದು. ಈ ರೀತಿ ಕೈಗೆ ಬಂದ ಬೆಳೆಯನ್ನು ನಾಶಮಾಡುವುದು ಯಾವ ಮಟ್ಟಕ್ಕೂ ಸರಿ ಅಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಂದಾಜು 6 ಲಕ್ಷ ರೂಪಾಯಿ ಆದಾಯ ಈ ಬೆಳೆಯಿಂದ ನಿರೀಕ್ಷಿಸಲಾಗುತ್ತಿತ್ತು. ಆದರೆ ಈಗಾಗಲೇ ಹತ್ತಿ ಗಿಡಗಳನ್ನು ಹಾಳುಮಾಡಿರುವುದರಿಂದ 2 ರಿಂದ 2.5 ಲಕ್ಷ ರೂ. ನಷ್ಟ ಸಂಭವಿಸುವ ಸಾಧ್ಯತೆ ಇದೆ ಎಂದು ರೈತ ಜುಂಜಣ್ಣ ಆತಂಕ ವ್ಯಕ್ತಪಡಿಸಿದ್ದಾರೆ.