ಚೀನಾ | ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ (S. Jaishankar) ತಾಲಿಬಾನ್ನ (Taliban) ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಜೊತೆ ದೂರವಾಣಿ ಮಾತುಕತೆ ನಡೆಸಿದ ಕೆಲ ದಿನಗಳಲ್ಲೇ ಚೀನಾ ತೀವ್ರ ರಾಜತಾಂತ್ರಿಕ ಚಟುವಟಕೆಯಲ್ಲಿ ತೊಡಗಿದ್ದು, ತ್ರಿಪಕ್ಷೀಯ ಸಭೆಗೆ (China Meeting) ಆತಿಥ್ಯ ನೀಡಿದೆ.
ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನೇತೃತ್ವದಲ್ಲಿ ಬುಧವಾರ ನಡೆದ ಅನೌಪಚಾರಿಕ ಸಭೆಯಲ್ಲಿ (China Meeting) ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಭಾಗವಹಿಸಿದ್ದು, ಪರಸ್ಪರ ರಾಯಭಾರಿಗಳನ್ನು ಕಳುಹಿಸುವ ಕುರಿತು ತಾತ್ವಿಕ ಒಪ್ಪಂದ ತಲುಪಲಾಗಿದೆ.
ಸಭೆಗೆ ಮೊದಲು ವಾಂಗ್ ಯಿ ಅವರು ಪಾಕ್ ವಿದೇಶಾಂಗ ಸಚಿವ ಇಶಾಕ್ ದಾರ್ ಹಾಗೂ ಅಫ್ಘಾನ್ ವಿದೇಶಾಂಗ ಸಚಿವ ಮುತ್ತಕಿ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಸಭೆಯಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಟ, ವ್ಯಾಪಾರ ವಿಸ್ತರಣೆ ಹಾಗೂ ಪ್ರಾದೇಶಿಕ ಶಾಂತಿ ಸ್ಥಿರತೆ ಕುರಿತ ಮಹತ್ವದ ನಿರ್ಣಯಗಳಿಗೆ ತಲುಪಲಾಗಿದೆ.

ಚೀನಾ-ಪಾಕ್ ಆರ್ಥಿಕ ಕಾರಿಡಾರ್ ಯೋಜನೆಯನ್ನು ಅಫ್ಘಾನಿಸ್ತಾನವರೆಗೆ ವಿಸ್ತರಿಸುವ ಬಗ್ಗೆ ಸಹ ತ್ರಿಪಕ್ಷೀಯ ರಾಜಿ ವ್ಯಕ್ತವಾಗಿದೆ. ಇದು ಪ್ರಾದೇಶಿಕ ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ್ದಾಗಿರಬಹುದು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ಇದೇ ಸಂದರ್ಭದಲ್ಲಿ, ಪಾಕ್ ಗಡಿಪಾರು ನೀತಿ ಹಾಗೂ ಡಿಸೆಂಬರ್ 2024ರ ಬಾಂಬ್ ದಾಳಿಯಿಂದ ಹಾಳಾದ ಪಾಕ್-ಅಫ್ಘಾನ್ ಸಂಬಂಧಗಳ ನಡುವೆ ನಡೆಯುತ್ತಿರುವ ಈ ಸಭೆ, ಎರಡೂ ದೇಶಗಳ ನಡುವೆ ಸಮನ್ವಯ ಸಾಧಿಸಲು ಚೀನಾ ಪ್ರಯತ್ನಿಸುತ್ತಿರುವ ಸಂಕೇತವಾಗಿದೆ.
ಜೈಶಂಕರ್ ಮತ್ತು ಮುತ್ತಕಿ ನಡುವಿನ ಮಾತುಕತೆ ತಾಲಿಬಾನ್ ಆಡಳಿತದೊಂದಿಗೆ ಭಾರತದ ಮೊದಲ ಸಚಿವೀಯ ಮಟ್ಟದ ಸಂವಾದವಾಗಿದ್ದು, ಪ್ರಾದೇಶಿಕ ರಾಜತಾಂತ್ರಿಕ ಗತಿಶೀಲತೆಗೆ ಹೊಸ ರೂಪ ನೀಡುವ ಸಾಧ್ಯತೆಯಿದೆ.