ತುಮಕೂರು | ಬಿಜೆಪಿ ಸಂಸದ ತೇಜಸ್ವಿ ಸೂರ್ಯ (MP Tejaswi Surya) ವಿರುದ್ಧ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ (MLA Suresh Gowda) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತುಮಕೂರಿಗೆ ಮೆಟ್ರೋ (Tumkur Metro) ತರುವ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಸದ ತೇಜಸ್ವಿ ಸೂರ್ಯ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಹೇಳಿಕೆಗೆ ತುಮಕೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮೆಟ್ರೋ ಗೆ ವಿರೋಧ ಮಾಡಿರುವುದು ಅವರವರ ಅಭಿಪ್ರಾಯ, ಆದರೆ ಇದು ಇನ್ನೂ ಆರಂಭವೇ ಆಗಿಲ್ಲ ಹೀಗಾಗಿ ವಿರೋಧ ಮಾಡುತ್ತಿರುವುದು ಸರಿಯಲ್ಲ ಎಂದರು.
ತೇಜಸ್ವಿ ಸೂರ್ಯ ಪ್ರಧಾನಮಂತ್ರಿಯಲ್ಲ, ರೈಲ್ವೆ ಮಂತ್ರಿಯಲ್ಲ, ಮುಖ್ಯಮಂತ್ರಿ ಅಲ್ಲವೇ ಅಲ್ಲ ಈ ವಿಚಾರದಲ್ಲಿ ಅವರ ಹೇಳಿಕೆಗೆ ಮಾನ್ಯತೆ ಇಲ್ಲ. ಹೀಗಾಗಿ ಮೆಟ್ರೋ ತುಮಕೂರು ಜಿಲ್ಲೆಗೆ ಬಂದರೆ ನಾನು ಸ್ವಾಗತ ಮಾಡುತ್ತೇನೆ ಎಂದು ಹೇಳಿದರು.
ಇನ್ನು ಮೆಟ್ರೋ ಎನ್ನುವುದು ಕೆಎಸ್ಆರ್ಟಿಸಿ ಬಸ್ ನಿಲ್ದಾಣವಲ್ಲ ಏಕಾಏಕಿ ಒಂದೆರಡು ದಿನದಲ್ಲಿ ತಂದು ಇಡುವುದಕ್ಕೆ. ಸುಮಾರು 25 ರಿಂದ 30 ಸಾವಿರ ಕೋಟಿ ಈ ಯೋಜನೆಗೆ ಬೇಕು. ಪರಮೇಶ್ವರ್ ಚುನಾವಣೆ ಸಂದರ್ಭದಲ್ಲಿ ಭರವಸೆ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಇದು ಬರಿ ಪ್ರಚಾರಕ್ಕೆ ಮಾತ್ರ ಸೀಮಿತವಾಗುತ್ತಿದೆ. ಬೆಂಗಳೂರಿನಲ್ಲಿ ಇನ್ನೂ ಮೆಟ್ರೋ ಗಳು ನಡೆಯುತ್ತಿವೆ. ಇದರಿಂದಾಗಿ ತುಮಕೂರಿಗೆ ಮೆಟ್ರೋ ಬರುತ್ತದೆ ಎಂದು ಯಾವ ಭರವಸೆ ಇಟ್ಟುಕೊಳ್ಳಬೇಕು ಎಂದರು.